ರಾಜೀವ್ ಗಾಂಧಿ ಹಂತಕರಿಗೆ ಜೀವಾವಧಿ ಶಿಕ್ಷೆ

1:03 PM, Tuesday, February 18th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Rajiv-Gandhiನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರ ಗಲ್ಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆಯಾಗಿ ಮಂಗಳವಾರ ಪರಿವರ್ತಿಸಿದೆ.

ಕ್ಷಮಾದಾನ ಅರ್ಜಿ ವಿಲೇವಾರಿಯಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ತಮ್ಮ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬೇಕು ಎಂದು ಮೂವರು ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಇಂದು ತೀರ್ಪು ಪ್ರಕಟಿಸಿದೆ.

‘ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಹಂತಕರಿಗೆ ಕ್ಷಮಾದಾನ ಇಲ್ಲ. ಅವರಿಗೆ ಗಲ್ಲು ಶಿಕ್ಷೆಯೇ ಸೂಕ್ತ’ ಎಂದು  ಸುಪ್ರೀಂಕೋರ್ಟ್ ಈ ಹಿಂದಿನ ವಿಚಾರಣೆಯಲ್ಲಿ ಅಭಿಪ್ರಾಯಪಟ್ಟಿತ್ತು.

ಅಲ್ಲದೆ ಕೇಂದ್ರ ಸರ್ಕಾರ ಸಹ ರಾಜೀವ್ ಗಾಂಧಿ ಕೊಂದ ಕೊಲೆಗಾರರ ಶಿಕ್ಷೆಯನ್ನು ಕಡಿತಗೊಳಿಸುವುದು ಬೇಡ ಎಂದು ಮನವಿ ಮಾಡಿತ್ತು. ಆದರೆ ಕೇಂದ್ರದ ಮನವಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್ ಅಂತಿಮವಾಗಿ ರಾಜೀವ ಹಂತಕರ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಿದೆ.  ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪಿನಿಂದಾಗಿ ಮೂವರು ಅಪರಾಧಿಗಳಾದ ಮುರಗನ್, ಪೆರಾರಿವಲನ್, ಸಂತನ್ ನೇಣು ಕುಣಿಕೆಯಿಂದ ಪಾರಾಗಿದ್ದಾರೆ.

ಈ ಹಿಂದೆ ಗಲ್ಲುಶಿಕ್ಷೆ ಜಾರಿಗೊಳಿಸುವಲ್ಲಿ ವಿಳಂಬವಾಗಿದೆ ಎಂಬ ಕಾರಣಕ್ಕಾಗಿ ಕರ್ನಾಟಕದ 7 ಮಂದಿ ಸೇರಿ15 ಮಂದಿಯ ಮರಣದಂಡನೆಯನ್ನು ಕೋರ್ಟ್ ಜೀವಾವಧಿಯಾಗಿ ಮಾರ್ಪಡಿಸಿ ಆದೇಶ ನೀಡಿತ್ತು.

ಎಲ್‌ಟಿಟಿಇ ವಿರುದ್ದದ ಕಾರ್ಯಾಚರಣೆಗೆ ಭಾರತದಿಂದ ಶಾಂತಿಪಾಲನಾ ಪಡೆಯನ್ನು ರವಾನಿಸಿದ್ದ ರಾಜೀವ್ ಗಾಂಧಿ ಅವರು ಎಲ್‌ಟಿಟಿಇ ಉಗ್ರ ಸಂಘಟನೆಯ ಕೆಂಗಣ್ಣಿಗೆ ಗುರಿಯಾಗಿದ್ದರು. 1991ರ ಮೇ 21ರಂದು ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ತಮಿಳುನಾಡಿನ ಶ್ರೀಪೆರುಂಬದೂರ್‌ಗೆ ಆಗಮಿಸಿದ್ದ ರಾಜೀವ್ ಅವರನ್ನು ಎಲ್‌ಟಿಟಿಇ ಸಂಘಟನೆಯ ಸದಸ್ಯರು ಮಾನವ ಬಾಂಬ್ ಸಿಡಿಸುವ ಮೂಲಕ ಕೊಂದು ಹಾಕಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English