[1]ಸುರತ್ಕಲ್ : ಸಿಐಎಸ್ಎಫ್ ಸಿಬ್ಬಂದಿಯೊಬ್ಬ ತನ್ನ ಸರ್ವಿಸ್ ರೈಫಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ತಡರಾತ್ರಿ ಪಣಂಬೂರು ಸಿಐಎಸ್ಎಫ್ ಕ್ಯಾಂಪ್ನಲ್ಲಿ ಸಂಭವಿಸಿದೆ.
ಮಹಾರಾಷ್ಟ್ರ ನಿವಾಸಿ ಸಂದೀಪ್ ಸರ್ಕಟೆ (26) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಕೇವಲ ಎರಡು ವರುಷದ ಹಿಂದೆಯಷ್ಟೇ ಸಿಐಎಸ್ಎಫ್ಗೆ ಸೇರ್ಪಡೆಗೊಂಡಿದ್ದ ಸಂದೀಪ್ ಆರಂಭದಿಂದಲೂ ಪಣಂಬೂರು ವಿಭಾಗದಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದರು. ಶುಕ್ರವಾರ ಇವರು ರಾತ್ರಿ ಪಾಳಿಯ ಕೆಲಸವನ್ನು ನಿರ್ವಹಿಸುತ್ತಿದ್ದು ತಡರಾತ್ರಿ 1.20ರ ಸುಮಾರಿಗೆ ತಮ್ಮ ಕಚೇರಿಯ ಹಿಂಭಾಗಕ್ಕೆ ತೆರಳಿ ಸರ್ವಿಸ್ ರೈಫಲ್ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆ ನಡೆದ ವೇಳೆ ಹಿರಿಯಾಧಿಕಾರಿ ಹಾಗೂ ಸಹೋದ್ಯೋಗಿ ಕರ್ತವ್ಯದಲ್ಲಿದ್ದರೂ ಅವರ ಕಣ್ಣು ತಪ್ಪಿಸಿ ಈ ಕೃತ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸಂಜೆಯಿಂದ ಸಾಮಾನ್ಯವಾಗಿಯೇ ಇದ್ದ ಸಂದೀಪ್ ಏಕಾಏಕಿಯಾಗಿ ಈ ತೀರ್ಮಾನ ಏತಕ್ಕೆ ತಳೆದರೆಂದು ತಿಳಯುತ್ತಿಲ್ಲ. ಅವರಿಗೆ ಆತ್ಮಹತ್ಯೆ ನಡೆಸುವಂತಹ ಯಾವ ಸಮಸ್ಯೆಯೂ ಕರ್ತವ್ಯದ ಸ್ಥಳದಲ್ಲಿ ಇರಲಿಲ್ಲ ಎಂದು ಹಿರಿಯಾಧಿಕಾರಿಗಳು ತಿಳಿಸಿದರಾದರೂ, ಸಂದೀಪ್ ಕೆಲಸ ಮಾಡುವ ಸಮಯದಲ್ಲಿ ಮಾನಸಿಕ ಕಿರುಕುಳ ಎದುರಿಸುತ್ತಿದ್ದ, ಈ ಬಗ್ಗೆ ಸಾಕಷ್ಟು ಬಾರಿ ತನ್ನ ನೋವನ್ನು ತೋಡಿಕೊಂಡಿರುವುದಾಗಿ ಸಹೋದ್ಯೋಗಿಗಳು ತಿಳಿಸಿ ದ್ದಾರೆ. ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯ ನ್ನು ನಡೆಸುತ್ತಿದ್ದಾರೆ.