ಕಾರ್ಕಳ: ಪೊಲೀಸ್ ಬೊಲೆರೋ ಜೀಪ್ ಹಾಗೂ ಸರಕಾರಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಜೀಪ್ನಲ್ಲಿದ್ದ ಬೆಂಗಳೂರು ಪಶ್ಚಿಮ ವಲಯದ ಡಿಸಿಪಿ ಲಾಬೂರಾಮ್ ಅವರ ಪತ್ನಿ ಗಾಯತ್ರಿ (35) ಹಾಗೂ ಜೀಪ್ ಚಾಲಕ ನಟರಾಜ್ ಸಾವಿಗೀಡಾಗಿ, ಉಳಿದ ಮೂವರು ಗಾಯಗೊಂಡ ಘಟನೆ ತಾಲೂಕಿನ ಬೈಲೂರು ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ಬೊಲೇರೊ ಪೊಲೀಸ್ ಜೀಪ್ ಧರ್ಮಸ್ಥಳದಿಂದ ಕಾರ್ಕಳ ಮೂಲಕ ಉಡುಪಿಗೆ ಸಾಗುತ್ತಿದ್ದು ಅದರಲ್ಲಿ 5 ಜನ ಪ್ರಯಾಣಿಕರಿದ್ದರು. ಬಸ್ ಉಡುಪಿಯಿಂದ ಕಾರ್ಕಳ ಕಡೆಗೆ ಬರುತ್ತಿತ್ತು. ಮಧ್ಯಾಹ್ನ 1.30ರ ಸುಮಾರಿಗೆ ಬೈಲೂರು ಗ್ರಾಮದ ನೀರೆ ಹೆದ್ದಾರಿ ಜಡ್ಡಿನಂಗಡಿಯಲ್ಲಿ ಅಪಘಾತ ಸಂಭವಿಸಿದೆ
ಗಾಯತ್ರಿ ಅವರ ಇಬ್ಬರು ಪುತ್ರಿಯರಾದ ಹರಿತ (15) ಮತ್ತು ಪುನಿತ (12) ಹಾಗೂ ಇನ್ನೋರ್ವ ಪೊಲೀಸ್ ಸಿಬಂದಿ ರಮೇಶ್ ಗಾಯಗೊಂಡಿದ್ದು ಅವರನ್ನು ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿದೆ.
ಘಟನೆಯಲ್ಲಿ ಗಾಯತ್ರಿ ಅವರ ದೇಹಕ್ಕೆ ತೀವ್ರವಾದ ಗಾಯವಾಗಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದರು. ಜೀಪ್ ಚಾಲಕ ನಟರಾಜ್ ಅವರು ತೀವ್ರವಾಗಿ ಗಾಯಗೊಂಡು ಅವರನ್ನು ಮಣಿಪಾಲಕ್ಕೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾದರು.
ಕಾರ್ಕಳ ಎ.ಎಸ್.ಪಿ. ಅಣ್ಣಾಮಲೈ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾರ್ಕಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.