ಜೈಲು ಶಿಕ್ಷೆಗೆ ಸೀಮಿತವಾದುದಲ್ಲ ಅದು ಸತ್‌ಪರಿವರ್ತನೆಯ ದಾರಿ : ರವೀಶ ತಂತ್ರಿ

11:24 PM, Thursday, December 17th, 2015
Share
1 Star2 Stars3 Stars4 Stars5 Stars
(5 rating, 6 votes)
Loading...
Kasaragod subjail

ಮುಳ್ಳೇರಿಯ : ಜೈಲು ಶಿಕ್ಷೆ ಎಂಬುದು ಕೇವಲ ಶಿಕ್ಷೆಗೆ ಮಾತ್ರ ಸೀಮಿತವಾದ ಜಾಗವಲ್ಲ ಅದೊಂದು ಆತ್ಮಚಿಂತನೆಯೊಡಗೂಡಿ ಸತ್‌ಪರಿವರ್ತನೆಯ ದಾರಿಯಲ್ಲಿ ಮುನ್ನಡೆಯುವ ಸದವಕಾಶವಾಗಿರುತ್ತದೆ. ಹಾಗಾಗಿ ಜೈಲಿನಲ್ಲಿರುವ ಎಲ್ಲಾ ಕೈದಿಗಳು ಬಿಡುಗಡೆಯಾಗಿ ಬರುವಾಗ ಸನ್ನಡತೆಯಿಂದ ಸಮಾಜದಲ್ಲಿ ಗುರುತಿಸಿಕೊಂಡು ಉನ್ನತಿಗೇರಲು ಭಗವತ್‌ಶಕ್ತಿಗಳು ಆನುಗ್ರಹಿಸಿ ಜನ್ಮಸಾರ್ಥಕ್ಯಗೊಳಿಸಿಕೊಳ್ಳಲಿ ಎಂದು ಕುಂಟಾರು ಬ್ರಹ್ಮಶ್ರೀ ರವೀಶ ತಂತ್ರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಸರಗೋಡು ಜಿಲ್ಲಾ ಸ್ಪೆಶಲ್ ಸಬ್ ಜೈಲಿನಲ್ಲಿ ಜೈಲಿನ ವಾಚನಾಲಯಕ್ಕೆ ಸುಮಾರು 250 ರಷ್ಟು ಕನ್ನಡ ಪುಸ್ತಕಗಳು ಹಾಗೂ ಕನ್ನಡ ದಿನಪತ್ರಿಕೆಯನ್ನು ಕುಂಟಾರಿನ ಪರಿವರ್ತನಾ ಯುವಕ ಸಂಘದ ವತಿಯಿಂದ ಬ್ರಹ್ಮಶ್ರೀ ರವೀಶ ತಂತ್ರಿ ಇವರ ನೇತೃತ್ವದಲ್ಲಿ ಪ್ರಸಿದ್ಧ ವಾಗ್ಮಿ ಮತ್ತು ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹಾಗೂ ಯುವ ಚಿಂತಕ ಎಸ್ ಎಂ ಉಡುಪ ಇವರ ಮುಖಾಂತರ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಪ್ರಸಿದ್ಧ ವಾಗ್ಮಿ ಮತ್ತು ಲೇಖಕ ಚಕ್ರವರ್ತಿ ಸೂಲಿಬೆಲೆ ಮಾತನಾಡುತ್ತಾ ತಪ್ಪು ಮನುಷ್ಯ ಸಹಜವಾದುದು. ಆದರೆ ತಿದ್ದಿಕೊಳ್ಳುವುದು ತಪ್ಪು ಪುನರಾವರ್ತನೆಯಾದಂತೆ ಮುನ್ನಡೆಯುವುದು ಸಜ್ಜನರ ಗುಣ. ಮನುಷ್ಯನ ಮನಸ್ಸೇ ಒಳಿತು-ಕೆಡುಕುಗಳಿಗೆ ಕಾರಣವಾದುದರಿಂದ ಮನಸ್ಸುನ್ನು ಒಳಿತೆನಡೆಗೆ ಹರಿಸಿದರೆ ದರೋಡೆಕೋರ ವಾಲ್ಮೀಕಿ ಶ್ರೇಷ್ಠ ಮಹಾಕಾವ್ಯ ಎಂದು ಹೆಸರಾದ ರಾಮಾಯಣವನ್ನು ಬರೆದಂತೆ ಜೈಲಿನೊಳಗಿರುವ ಎಲ್ಲಾ ಕೈದಿಗಳು ಸಹ ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡು ಶ್ರೇಷ್ಠ ವ್ಯಕ್ತಿಗಳಾಗಿ ಸಮಾಜದಲ್ಲಿ ಪ್ರತಿಷ್ಠಿತರಾಗಬೇಕು ಎಂದು ಹೇಳಿದರು.

ಸೆರೆಮನೆಯನ್ನು ಗುರುಮನೆಯನ್ನಾಗಿ ಪರಿವರ್ತಿಸುವ ರೀತಿಯಲ್ಲಿ ಈ ಜೈಲಿನಲ್ಲಿ ಕಾರ್ಯಗಳು ನಡೆದು, ಒಳಬಂದ ಪ್ರತಿಯೊಬ್ಬ ಕೈದಿಯೂ ಹೊರಹೋಗುವಾಗ ಶ್ರೇಷ್ಠ ಚಿಂತನೆಯನ್ನು ಹೊಂದಿದ ವ್ಯಕ್ತಿಯಾಗಬೇಕು. ಅದಕ್ಕಾಗಿ ನಾವು ನೀಡಿದ ಪುಸ್ತಕಗಳನ್ನು ಓದಿ ಅದರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಮೂಲಕ ಅಂಡಮಾನ್ ನಿಕೋಬಾರ್‌ನಲ್ಲಿರುವಂತಹ ಸೆಲ್ಯುಲರ್ ಜೈಲ್‌ನ್ನು ಲಕ್ಷೆಪಲಕ್ಷ ಪ್ರವಾಸಿಗಳು ಸಂದರ್ಶಿಸುವಂತೆ ಈ ಕಾಸರಗೋಡಿನ ಜಿಲ್ಲಾ ಸ್ಪೆಶಲ್ ಸಬ್ ಜೈಲ್ ಕೂಡ ಈ ನಿಟ್ಟಿನಲ್ಲಿ ಹೆಸರುವಾಸಿವಾಗಲಿ ಎಂದು ಯುವ ಚಿಂತಕ ಎಸ್.ಎಂ. ಉಡುಪ ಹೇಳಿದರು. ಈ ಸಂದರ್ಭದಲ್ಲಿ ಯುವ ಚಿಂತಕ ಎಸ್.ಎಂ ಉಡುಪ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಗಂಗಾಧರ ರಾವ್ ಮಾಟೆಡ್ಕ, ಪರಿವರ್ತನಾ ಯುವಕ ಸಂಘದ ಕೀರ್ತಿಪ್ರಸಾದ್ ಕುಂಟಾರು, ಲತೀಶ್ ಕುಂಟಾರು, ವೇಣುಗೋಪಾಲ ಭಟ್ ಇನ್ನಿತರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈಲಿನ ಸುಪರಿಟೆಂಡೆಂಟ್ ವೇಣುಗೋಪಾಲ್ ವಹಿಸಿದ್ದರು. ಜೈಲಿನ ಅಧಿಕಾರಿಗಳು ಸ್ವಾಗತಿಸಿ ವಂದಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English