ಮಂಗಳೂರು: ಒಬ್ಬ ಚಿತ್ರ ಕಲಾವಿದ ಬಣ್ಣ ಮತ್ತು ರೇಖೆಗಳ ಮೂಲಕ ಜೀವನದ ವಿವಿಧ ಮಜಲುಗಳನ್ನು ಬಿಂಬಿಸುವ ಶಕ್ತಿಯನ್ನು ಹೊಂದಿದ್ದಾನೆ. ಕಲೆಯ ಬೆಳಕು ನಮ್ಮ ಮನಸ್ಸನ್ನು ಅರಳಿಸುವಂತಾಗಬೇಕು. ಧರ್ಮ, ನಂಬಿಕೆಗಳಿರುವ ಕಲಾವಿದ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾನೆ. ಏಕತೆಯನ್ನು ಮೂಡಿಸುವಂತಹ ಕೆಲಸವಾದಾಗ ರಾಷ್ಟ್ರ ಸಮೃದ್ಧವಾಗಿ ಬೆಳೆಯುತ್ತದೆ. ಸಂಸ್ಕೃತಿ ಅಗಾಧವಾಗಿ ಬೆಳೆದಾಗ ಧ್ವೇಷ ದೂರವಾಗುತ್ತದೆ ಎಂದು ಮೂಡುಬಿದಿರೆ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚರ್ಯವರ್ಯ ಸ್ವಾಮೀಜಿ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಪುತ್ತಿಗೆಪದವು ಆಳ್ವಾಸ್ ಪ್ರೌಢಶಾಲಾ ಆವರಣದಲ್ಲಿ ಮೂರು ದಿನಗಳು ನಡೆಯಲಿರುವ ಆಳ್ವಾಸ್ ಚಿತ್ರಸಿರಿ -2016 10ನೇ ವರ್ಷದ ರಾಜ್ಯಮಟ್ಟದ ಚಿತ್ರಕಲಾ ಶಿಬಿರಕ್ಕೆ ಗುರುವಾರ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಹೃದಯ ಶ್ರೀಮಂತಿಕೆ ಇರುವ ಮೋಹನ ಆಳ್ವರ ವ್ಯಕ್ತಿತ್ವದಿಂದಾಗಿ ಮೂಡುಬಿದಿರೆ ಸಂಸ್ಕೃತಿಯ ಕಾಶಿಯಾಗಿದೆ. ಚೇತೋಹಾರಿಯಾದ ಮನಸ್ಥಿತಿಯಿದ್ದವರು ಮಾತ್ರ ಸಂಸ್ಕೃತಿಯನ್ನು ಬೆಳೆಸಲು ಸಾಧ್ಯ. ಕಲಾವಿದರು ಬಿನ್ನತೆಯನ್ನು ಸೃಷ್ಠಿಸದೆ, ಏಕತೆಯನ್ನು ಕಲೆಯ ಮೂಲಕ ಮೂಡಿಸಬೇಕು ಎಂದರು.
ಉಡುಪಿ ಸಾಯಿರಾಧ ಗ್ರೂಪ್ಸ್ನ ಮನೋಹರ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ, ಶಿಬಿರ ಸಲಹಾ ಸಮಿತಿಯ ಗಣೇಶ್ ಸೋಮಯಾಜಿ, ಪುರುಷೋತ್ತಮ ಅಡ್ವೆ, ಡಾ. ಯೋಗೀಶ್ ಕೈರೋಡಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English