ಮಂಗಳೂರು: ಸುರತ್ಕಲ್ ಸಮೀಪದ ಕಾಟಿಪಳ್ಳ ಬ್ಯಾಂಕ್ ನಲ್ಲಿ ಬ್ಯಾಂಕ್ ಪ್ರಬಂಧಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಪ್ರಕರಣವನ್ನು ಖಂಡಿಸಿ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಮಂಗಳೂರು ಸ್ಟೇಟ್ ಬ್ಯಾಂಕ್ ಎದುರು ಪ್ರತಿಭಟನಾ ಸಭೆ ನಡೆಸಿದರು.
ಈ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಕೂಡಲೇ ಬಂಧಿಸದೆ ಆತನಿಗೆ ಜಾಮೀನು ದೊರೆಯುವಂತೆ ಮಾಡಿದ್ದಾರೆಂದು ಒಕ್ಕೂಟದ ಸದಸ್ಯರು ಒತ್ತಾಯಿಸಿದರು.
ಎರಡು ವರ್ಷಗಳಿಂದ ಚಾಲ್ತಿಯಲ್ಲಿಲ್ಲದ ಖಾತೆಯಲ್ಲಿ ಹಣ ಜಮಾ ಮಾಡಲು ಬಂದವನಲ್ಲಿ ಕೆವೈಸಿ ದಾಖಲೆಗಳನ್ನು ಕೇಳುವುದು ಅಪರಾಧವೇನಲ್ಲ. ಆರ್ಬಿಐ ನಿಯಮಾವಳಿ ಪ್ರಕಾರ ಚಾಲ್ತಿಯಲ್ಲದ ಖಾತೆಗಳಲ್ಲಿ ವ್ಯವಹಾರ ಮಾಡಬೇಕಾದರೆ ಪೂರಕ ದಾಖಲೆಗಳನ್ನು ನೀಡಲೇಬೇಕು. ಆದರೆ, ಅರೋಪಿ ಅಮರ್ ಸೋನ್ಸ್ ಸಿಂಡಿಕೇಟ್ ಬ್ಯಾಂಕಿನ ಕಾಟಿಪಳ್ಳ ಶಾಖೆಯ ಪ್ರಬಂಧಕರಾದ ಕೆ. ಕುಂಞಣ್ಣ ನಾಯ್ಕ್ ಮೇಲೆ ಹಲ್ಲೆ ನಡೆಸಿರುವುದು ಸರಿಯಲ್ಲ. ಅಮರ್ ಸೋನ್ಸ್ ಯಾವುದೇ ದಾಖಲೆಯನ್ನು ಬ್ಯಾಂಕಿಗೆ ನೀಡಲು ನಿರಾಕರಿಸಿದ್ದಾರೆ ಎಂದು ಹೇಳಿದರು.
ಘಟನೆ ಮಾರ್ಚ್ 15ರಂದು ನಡೆದಿದ್ದರೂ ಪೊಲೀಸರು 20ರಂದು ಆರೋಪಿಯನ್ನು ಬಂಧಿಸುತ್ತಾರೆ. ತಕ್ಷಣವೇ ನ್ಯಾಯಾಲಯಕ್ಕೆ ಹಾಜರು ಪಡಿಸಿ ಜಾಮೀನಿನಲ್ಲಿ ಬಿಡುಗಡೆ ಮಾಡುತ್ತಾರೆ. ಇದರಿಂದ ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸೂಕ್ತ ರಕ್ಷಣೆ ಸಿಗುವುದಿಲ್ಲ ಎಂಬ ಸಂದೇಶವನ್ನು ಪೊಲೀಸರು ರವಾನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
Click this button or press Ctrl+G to toggle between Kannada and English