ಮಂಗಳೂರು : ಇಂಡೋನೇಶ್ಯ ಮತ್ತು ಭಾರತದ ನಡುವೆ ಆರ್ಥಿಕ ವ್ಯವಹಾರ ಬೆಳವಣಿಗೆಗೆ ವಿಪುಲ ಅವಕಾಶಗಳಿವೆ ಎಂದು ಭಾರತದಲ್ಲಿರುವ ಇಂಡೋನೇಶ್ಯ ಕಾನ್ಸುಲ್ ಜನರಲ್ ಸವುತ್ಸಿರಿಂಗೊರಿಂಗೊ ತಿಳಿಸಿದ್ದಾರೆ.
ನಗರದ ಕೆಸಿಸಿಐ ವತಿಯಿಂದ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡ ಭಾರತ-ಇಂಡೋನೇಶ್ಯ ನಡುವೆ ಆರ್ಥಿಕ ವ್ಯವಹಾರ ಹಾಗೂ ಹೂಡಿಕೆ, ಇಂಡೋನೇಶ್ಯದ ಟ್ರೇಡ್ ಎಕ್ಸಪೋ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಭಾರತ ಮತ್ತು ಇಂಡೋನೇಶ್ಯ ನಡುವೆ 2016ರಲ್ಲಿ 12.96 ಬಿಲಿಯನ್ ಅಮೇರಿಕಾ ಡಾಲರ್ ವ್ಯಾಪಾರ ವಹಿವಾಟು ನಡೆದಿದೆ. ಭಾರತದಿಂದ ಇಂಡೋನೇಶ್ಯಕ್ಕೆ ಬರುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲೂ ಏರಿಕೆಯಾಗಿದೆ. 2016ರಲ್ಲಿ ಭಾರತದಿಂದ 1.86 ಲಕ್ಷ ಪ್ರವಾಸಿಗರು ಇಂಡೋನೇಶ್ಯಕ್ಕೆ ಭೇಟಿ ನೀಡಿದ್ದಾರೆ. ಭಾರತ ಸೇರಿದಂತೆ 169 ದೇಶಗಳ ಪ್ರವಾಸಿಗರು ಇಂಡೋನೇಶ್ಯಕ್ಕೆ 30 ದಿನಗಳ ಉಚಿತ ವೀಸಾದಲ್ಲಿ ಪ್ರವಾಸ ತೆರಳಲು ಅವಕಾಶ ನೀಡಲಾಗಿದೆ. ಪ್ರವಾಸೋದ್ಯಮದ ಬೆಳವಣಿಗೆಯಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದರು.
ಭಾರತ ಮತ್ತು ಇಂಡೋನೇಶ್ಯ ರಾಮಾಯಣದ ಕಾಲದಿಂದಲೂ ನಡೆದು ಬಂದ ಚಾರಿತ್ರಿಕ ಹಾಗೂ ಪುರಾಣ ಕಾಲದ ಸಾಂಸ್ಕೃತಿಕ ಸಾಮ್ಯತೆಗಳಿವೆ. ಬಾಲಿಯಲ್ಲಿ ಹನುಮಂತ, ರಾಮ-ಸೀತೆ, ಗಣಪತಿಯ ವಿಗ್ರಹಗಳು ಗುಡಿಗಳು ಸಾಕಷ್ಟು ಕಂಡು ಬರುತ್ತವೆ. ಭಾರತದ ವೈವಿಧ್ಯಮಯ ಸಂಸ್ಕೃತಿ, ಭಾಷೆಗಳು ಜನಜೀವನ ಕ್ರಮಗಳು ಹಾಗೂ ಇಂಡೋನೇಶಿಯಾದ ಸಂಸ್ಕೃತಿಗಳ ನಡುವೆ ಹಲವು ಸಾಮ್ಯತೆಗಳಿವೆ. ಇಂಡೋನೇಶ್ಯದ ಅಭಿವೃದ್ಧಿಗೆ ಸದ್ಯದ ಆಡಳಿತ ವ್ಯವಸ್ಥೆ ವಿದೇಶಿ ನೇರ ಬಂಡವಾಳ ಹೂಡಿಕೆಗೆ ವಿಪುಲ ಅವಕಾಶಗಳನ್ನು ಕಲ್ಪಿಸಿದೆ ಎಂದರು.
ಇದೇ ಸಂದರ್ಭ ಇಂಡೋನೇಶ್ಯದ ಟ್ರೇಡ್ ಎಕ್ಸ್ಪೋ ಬಗ್ಗೆ ಮಾಹಿತಿ ನೀಡಿದ ಅವರು ಎಪ್ರಿಲ್ 26-30ರವರೆಗೆ ಜಕಾರ್ತದಲ್ಲಿ ಅಂತಾರಾಷ್ಟ್ರೀಯ ಕರಕುಶಲ ಮೇಳ ನಡೆಯಲಿದೆ. ಅಕ್ಟೋಬರ್ 11-15ರವರೆಗೆ ಇಂಡೋನೇಶ್ಯದ ಜಕಾರ್ತದಲ್ಲಿ ಟ್ರೇಡ್ ಎಕ್ಸ್ಪೋ ಮೇಳ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೀವನ್ ಸಲ್ದಾನಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವಾತಿಕಾ ಪೈ ಸ್ವಾಗತಿಸಿದರು. ಇಂಡೋನೇಶ್ಯ ಕಾನ್ಸುಲೇಟ್ ಜನರಲ್ (ಆರ್ಥಿಕ)ಜೋಸ್ೆ ಸೀತೆಪು ಮತ್ತು ಕೆಸಿಸಿಐನ ಪದಾಕಾರಿಗಳು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English