ಮಂಗಳೂರು : ಪರ್ಶಿಯನ್ ಕಥೆಯಿಂದ ಸ್ಪೂರ್ತಿ ಪಡೆದು ಸುಧೀರ್ ಅತ್ತಾವರ್ ಅವರು ಬರೆದಿರುವ ‘ಬಕಾಲಿಯ ಹೂ’ ಸಂಗೀತಮಯ ಕೃತಿಯನ್ನು ಹಿರಿಯ ಲೇಖಕಿ ಸಾರಾ ಅಬೂಬಕರ್ ಬಿಡುಗಡೆಗೊಳಿಸಿದರು.
ಈಗ ಓದುವವರ ಸಂಖ್ಯೆ ಕಡಿಮೆ ಆಗಿದೆ, ಕೃತಿಕಾರರು ತಮ್ಮ ಮನಸ್ಸಿನ ಆಳದಲ್ಲಿರುವ ಕೆಲವೊಂದು ಸತ್ಯಗಳನ್ನು ಕೃತಿಗಳ ಮೂಲಕ ಸಮಾಜಕ್ಕೆ ಕೊಡುತ್ತಾರೆ. ಸಮಾಜದಲ್ಲಿ ಮನುಷ್ಯರಾಗಿ ಹೇಗೆ ಬದುಕಬೇಕೆಂಬ ಬಗ್ಗೆ ತಿಳಿ ಹೇಳುತ್ತಾರೆ. ಆದರೆ ಪುಸ್ತಕಗಳನ್ನು ಓದದೆ ಕೃತಿಗಳಲ್ಲಿರುವ ವಾಸ್ತವಾಂಶಗಳು ಸಮಾಜಕ್ಕೆ ತಲುಪುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದರು.
ಮಂಗಳೂರಿನ ಇಂದಿನ ಪರಿಸ್ಥಿತಿ ಬದಲಾಗಿದೆ , ಹಿಂದೆಲ್ಲಾ ಅನ್ಯೋನ್ಯತೆಯಿಂದ ಜೀವನ ನಡೆಸುತ್ತಿದ್ದ ಇಲ್ಲಿ, ಯುವಜನತೆ ಯಾಕೆ ಹೀಗಾಡುತ್ತಿದ್ದಾರೆ ಎಂಬ ಆತಂಕವಾಗುತ್ತಿದೆ. ವಾಟ್ಸಾಪ್ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ವಿಷಮಯ ವಿಷಯಗಳನ್ನು ಬಿತ್ತುವ ಮೂಲಕ ಸಂಘರ್ಷಗಳಿಗೆ ಯುವಜನತೆ ಎಡೆ ಮಾಡಿಕೊಡುತ್ತಿದ್ದಾರೆ. ಇದರೊಂದಿಗೆ ಶಿಕ್ಷಣ ವ್ಯವಸ್ಥೆಯೂ ಹಾಳಾಗುತ್ತಿದೆ ಎಂದು ಆತಂಕ ವ್ಯಕ್ತ ಪಡಿಸಿದರು.
ಇಂದು ಪುಸ್ತಕಗಳನ್ನು ಬರೆದರೂ ಓದುವವರೇ ಇಲ್ಲ. ಗ್ರಂಥಾಲಯ ಇಲಾಖೆಯಿಂದಲೂ ಪ್ರೋತ್ಸಾಹ ಸಿಗುತ್ತಿಲ್ಲ. ಕಳೆದ ಮೂರ್ನಾಲ್ಕು ವರ್ಷಗಳಿಂದ ಪುಸ್ತಕ ಖರೀದಿಗೆ ಸಮರ್ಪಕವಾಗಿ ಹಣ ಬಿಡುಗಡೆಯಾಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕೃತಿಕಾರ ಸುಧೀರ್ ಅತ್ತಾವರ್ ಮಾತನಾಡಿ ‘ಗುಲ್-ಏ- ಬಕಾವಲಿ’ ಅಥವಾ ಗುಲೇಬಕಾವಲಿ ಎಂಬ ಕಥಾನಕವನ್ನು ಎಂ.ಎಸ್. ಸತ್ಯು ಅವರ ಪ್ರೇರಣೆಯ ಮೇರೆಗೆ, ಅಭಿರುಚಿ ಪ್ರಕಾಶನದಿಂದ ಈ ಕೃತಿಯನ್ನು ಪ್ರಕಟಿಸಲಾಗುತ್ತಿದೆ. 7ನೆ ಶತಮಾನದಲ್ಲಿ ಈ ಕೃತಿ ರಚನೆಯಾಗಿರುವುದಾಗಿ ಹೇಳಲಾಗಿದ್ದರೂ ಅದರ ಮೂಲ ಕೃತಿ ದೊರಕಿಲ್ಲ. 1700ರಲ್ಲಿ ಬಂಗಾಲಿ ಲೇಖಕ ಪರ್ಶಿಯನ್ ಭಾಷೆಯಲ್ಲಿ ಬರೆದ ಕೃತಿಯನ್ನು ಆಧರಿಸಿ ಅದನ್ನು ಕನ್ನಡಕ್ಕೆ ರೂಪಾಂತರಿಸಿದ್ದೇನೆ. ಬಂಗಾಲಿ ಕೃತಿಯು ಈಗಾಗಲೇ ಮೂಕಿ ಹಾಗೂ ವಾಕಿ ಚಿತ್ರವಾಗಿ ತೆರೆ ಕಂಡಿದೆ. ಇದೀಗ ಕನ್ನಡದ ಕೃತಿಯನ್ನು ಅಮೆಚೂರು ಡ್ರಾಮಾ ಅಸೋಸಿಯೇಶನ್ನವರು ಕನ್ನಡದಲ್ಲಿ ನಾಟಕವಾಗಿ ಪ್ರದರ್ಶನಗಳನ್ನು ಕಾಣುತ್ತದೆ. ಈಗಾಗಲೇ ಈ ನಾಟಕವು ಐದು ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ ಎಂದು ಅಭಿಪ್ರಾಯಿಸಿದರು.
ಅಭಿರುಚಿ ಪ್ರಕಾಶನದ ಗಣೇಶ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English