ಮಂಗಳೂರು : ರೀವನ್ ಸಿನಿ ಕ್ರಿಯೇಶನ್ಸ್ ಬ್ಯಾನರ್ನಡಿಯಲ್ಲಿ ತಯಾರಾಗುತ್ತಿರುವ ಚೊಚ್ಚಲ ತುಳು ಚಿತ್ರ ‘ಜೈ ಮಾರುತಿ ಯುವಕ ಮಂಡಲ (ರಿ)’ ಇದರ ಮುಹೂರ್ತ ಸಮಾರಂಭ ಶುಕ್ರವಾರ ಬೆಳಿಗ್ಗೆ ಗಂಟೆ ೯ಕ್ಕೆ ಹಳೆಕೋಟೆ ಶ್ರೀ ಮುಖ್ಯಪ್ರಾಣ ದೇವಸ್ಥಾನ, ಬೋಳಾರ, ಮಂಗಳೂರು ಇಲ್ಲಿ ನಡೆಯಿತು.
ದೊಂಬರಾಟ ತುಳು ಸಿನಿಮಾದ ನಿರ್ದೇಶಕ ರಾಜೇಶ್ ಬ್ರಹ್ಮಾವರ್ ಕ್ಲಾಪ್ ಮಾಡುವ ಮೂಲಕ ‘ಜೈ ಮಾರುತಿ ಯುವಕ ಮಂಡಲ (ರಿ)’ ಚಿತ್ರದ ಮುಹೂರ್ತ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಚಿತ್ರದ ಯಶಸ್ವಿಗೆ ಮತ್ತು ಚಿತ್ರ ತಂಡದ ಕಲಾವಿದರಿಗೆ ಶುಭ ಹಾರೈಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜ್ಷಾನೇಶ್, ಒಂದು ಮೊಟ್ಟೆಯ ಕಥೆ ಸಿನಿಮಾದ ರಾಜ್ ಬಿ ಶೆಟ್ಟಿ, ತುಳು ಕನ್ನಡ ಸಿನಿಮಾ ನಿರ್ದೇಶಕ ಸಾಯಿ ಕೃಷ್ಣ ಕುಡ್ಲ, ಇಂಟಕ್ ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ, ಕನ್ನಡ ಸಿನೆಮಾ ನಿರ್ಮಾಪಕ ಹೇಮಂತ್ ಸುವರ್ಣ, ನಟ ಚೇತಕ್ ಪೂಜಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಮೊದಲು ತೊಟ್ಟಿಲು ಚಿತ್ರಕ್ಕೆ ಸಹ ನಿರ್ಮಾಪಕರಾಗಿ ಹಾಗೂ ಕೋಳಿ ಕಳ್ರು ಕನ್ನಡ ಚಿತ್ರಕ್ಕೆ ನಿರ್ಮಾಪಕರಾಗಿ ಕೆಲಸಮಾಡಿದ ರಿಚರ್ಡ್ ಕಾರ್ಕಳ ಈ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ. ಚಿತ್ರದ ಚಿತ್ರೀಕರಣ ಸಸಿಹಿತ್ಲು ಬಳಿ ೨೫ ದಿನಗಳಲ್ಲಿ ಒಂದೇ ಹಂತದಲ್ಲಿ ನಡೆಯಲಿ.
ಯುವಕ ಮಂಡಲವೊಂದರಲ್ಲಿ ನಡೆಯುವ ಸನ್ನಿವೇಷಗಳನ್ನು ಈ ಚಿತ್ರದಲ್ಲಿ ಅಳವಡಿಸಲಾಗಿದ್ದು ಉತ್ತಮ ಸಂದೇಶದೊಂದಿಗೆ ಹಾಸ್ಯ ಸನ್ನಿವೇಶಗಳನ್ನು ಹೊಂದಿದೆ.
ರಂಬಾರೂಟಿ ಹಾಗೂ ತೊಟ್ಟಿಲ್ ತುಳುಚಿತ್ರ ನಿರ್ದೇಶಕರಾದ ಪ್ರಜ್ವಲ್ ಕುಮಾರ್ ಅತ್ತಾವರ್ ‘ಜೈ ಮಾರುತಿ ಯುವಕ ಮಂಡಲ(ರಿ)’ ದಲ್ಲಿ ನಿರ್ದೇಶಕರಾಗಿದ್ದಾರೆ. ಇದು ಅವರ ನಿದೇರ್ಶನದ ಮೂರನೇ ಚಿತ್ರ. ಚಿತ್ರಕ್ಕೆ ಸಂಗೀತ ತೊಟ್ಟಿಲ್ ತುಳು ಚಿತ್ರ ಖ್ಯಾತಿಯ ಕೊಳಲಗಿರಿ ಡಾಲ್ವಿನ್. ಛಾಯಾಗ್ರಹಣ ಅಶಂ ಜಲೆ ಕಶೆ ಕೊಂಕಣಿ ಚಿತ್ರ ಮತ್ತು ಅರೆ ಮರ್ಲೆರ್ ತುಳು ಚಿತ್ರದಲ್ಲೆ ಕೆಲಸ ಮಾಡಿದ ಉದಯ್ ಬಳ್ಳಾಲ್. ಸಾಹಿತ್ಯ ಕೀರ್ತನ್ ಭಂಡಾರಿ ಯವರದು.
ತಾರಾಗಣದಲ್ಲಿ ನಾಯಕ ನಟನಾಗಿ ಸ್ವರಾಜ್ ಶೆಟ್ಟಿ, ನಾಯಕಿಯಾಗಿ ಶಿಲ್ಪಾ ಶೆಟ್ಟಿ ಹಾಗೂ ಪ್ರಮುಖ ಹಾಸ್ಯ ಪಾತ್ರಗಳಲ್ಲಿ ಅರವಿಂದ ಬೋಳಾರ್, ದೀಪಕ್ ರೈ, ಉಮೇಶ್ ಮಿಜಾರ್, ಸುನಿಲ್ ನೆಲ್ಲಿಗುಡ್ಡೆ, ಜೆ.ಪಿ ತೂಮಿನಾಡ್, ಮನೋಜ್ ಕಾರ್ಕಳ, ಪ್ರಕಾಶ್ ತೂಮಿನಾಡ್ ಹಾಗೂ ಮತ್ತಿತ್ತರರು ಅಭಿನಯಿಸಲಿದ್ದಾರೆ.
ತಾಂತ್ರಿಕ ವಿಭಾಗದಲ್ಲಿ ಸಂಕಲನ ಶಂಕರ್ ನಾರಾಯಣ ಪೆರ್ಡೂರು, ಸ್ಥಿರಚಿತ್ರ ನಿಹಾಲ್ ಪೂಜಾರಿ, ಪ್ರಚಾರ ಕಲೆ ಹಿತೇಶ್ ಆಚಾರ್ಯ, ಪಿಆರ್ಒ ಶಿವಪ್ರಸಾದ್.
Click this button or press Ctrl+G to toggle between Kannada and English