ಕಾರವಾರ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕಳೆದ ಡಿಸೆಂಬರ್ ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಪರೇಶಾ ಮೇಸ್ತಾ ನಿವಾಸಕ್ಕೆ ಬುಧವಾರ ಭೇಟಿ ಆತನ ಪೋಷಕರಿಗೆ ಸಾಂತ್ವನ ಹೇಳಿದರು.
ನಿನ್ನೆ ಸಂಜೆ ಹೊನ್ನಾವರದ ತುಳಸಿ ನಗರದಲ್ಲಿರುವ ಮೇಸ್ತಾ ಮನೆಗೆ ಆಗಮಿಸಿದ ಅಮಿತ್ ಶಾ, ಪರೇಶ್ ತಂದೆ ಕಮಲಾಕರ್ ಮೇಸ್ತಾ ಅವರ ಜತೆ ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದರು.
ಈ ವೇಳೆ, ಪುತ್ರನ ಸಾವಿನ ಪ್ರಕರಣವನ್ನು ಸಿಬಿಐ ಬದಲಿಗೆ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ವಹಿಸುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ, ‘ಎನ್ಐಎ ತನಿಖೆಯ ಅಗತ್ಯವಿಲ್ಲ. ಬದಲಾಗಿ ಸಿಬಿಐನ ಎಸ್ಪಿ ಶ್ರೇಣಿಯ ಅಧಿಕಾರಿಯಿಂದ ತನಿಖೆ ಮಾಡಿಸಲಾಗುವುದು. ಆರೋಪಿಗಳಿಗೆ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆದರೆ ಪರೇಶ್ ಸಹೋದರ ಅಥವಾ ಸಹೋದರಿಗೆ ನೌಕರಿ ಕೊಡುವ ಬಗ್ಗೆ ಪ್ರತಿಕ್ರಿಯಿಸಲಿಲ್ಲ ಎಂದು ಕಮಲಾಕರ್ ಮೇಸ್ತಾ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಮಟ್ಟದ ಮುಖಂಡರು ಇದ್ದರು.
Click this button or press Ctrl+G to toggle between Kannada and English