ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಕೆ.ರಘುಪತಿ ಭಟ್ ಇಂದು ನಾಮಪತ್ರ ಸಲ್ಲಿಸಿದರು. ಕರಂಬಳ್ಳಿ ವೆಂಕಟರಮಣ ದೇವಸ್ಥಾನ, ರಥಬೀದಿಯ ಭೂತರಾಜ ದೇವ ಸ್ಥಾನ, ಅನಂತೇಶ್ವರ ಹಾಗೂ ಚಂದ್ರವೌಳಿಶ್ವರ, ಶ್ರೀಕೃಷ್ಣ ಮಠ, ಮುಖ್ಯಪ್ರಾಣ ದರ್ಶನ, ಪರ್ಯಾಯ ಸ್ವಾಮೀಜಿಯ ಆಶೀರ್ವಾದ ಪಡೆದ ರಘುಪತಿ ಭಟ್, ಚಿತ್ತರಂಜನ್ ಸರ್ಕಲ್ನಲ್ಲಿ ನಡೆದ ಕಾರ್ಯಕರ್ತರ ಸಮಾವೇಶದ ಬಳಿಕ ಪಾದಯಾತ್ರೆಯ ಮೂಲಕ ಚುನಾವಣಾ ಕಚೇರಿಗೆ ಆಗಮಿಸಿದರು.
ತನ್ನ ಪತ್ನಿ ಶಿಲ್ಪಾ ಜೊತೆ ಬಂದ ರಘುಪತಿ ಭಟ್, ಚುನಾವಣಾ ಕಚೇರಿ ಯಲ್ಲಿದ್ದ ತಾಯಿ ಸರಸ್ವತಿ ಬರಿತ್ತಾಯ ಅವರ ಆಶೀರ್ವಾದ ಪಡೆದು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಯಶ್ಪಾಲ್ ಸುವರ್ಣ, ಪ್ರಭಾಕರ ಪೂಜಾರಿ, ಪ್ರತಾಪ್ ಹೆಗ್ಡೆ, ಮನೋಹರ್ ಕಲ್ಮಾಡಿ ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ಅವರು, ಬಿಜೆಪಿ ಈ ಬಾರಿ ಗೆಲ್ಲುವ ವಿಶ್ವಾಸ ನಮಗೆ ಬಂದಿದೆ. ಜಿಲ್ಲೆಯ ಐದಕ್ಕೆ ಐದು ಸ್ಥಾನ ಗೆಲ್ಲುತ್ತೇವೆ. ಮೋದಿ ಚುನಾವಣಾ ಪ್ರಚಾರಕ್ಕಾಗಿ ಉಡುಪಿಗೆ ಆಗಮಿಸಲಿದ್ದಾರೆ. ಮೋದಿ ಪ್ರಚಾರಕ್ಕೆ ಆಗಮಿಸುವ ಎಲ್ಲ ಕ್ಷೇತ್ರಗಳು ಗೆಲುವು ಸಾಧಿಸಿದ ಇತಿಹಾಸ ಇದೆ ಎಂದು ತಿಳಿಸಿದರು.
Click this button or press Ctrl+G to toggle between Kannada and English