ಬಾಗಲಕೋಟೆ: ಬಾದಾಮಿ ಮತ್ತು ಚಾಮುಂಡೇಶ್ವರಿ ಮತ ಕ್ಷೇತ್ರದಿಂದ ಸ್ಪರ್ಧೆ ಮಾಡಲು ನನಗೆ ಜನರ ಆಶೀರ್ವಾದ ಇದೆ. ಯಾವುದೇ ಸೋಲಿನ ಭೀತಿ ಕಾಡುತ್ತಿಲ್ಲ. ಬಿಜೆಪಿಯವರಿಗೆ ಸೋಲಿನ ಭೀತಿ ಕಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಾನು ಕೊಪ್ಪಳದಿಂದಲೂ ಎಂಪಿ ಸ್ಥಾನಕ್ಕೆ ಸ್ಪರ್ಧಿಸಿದ್ದೆ. ಈ ಬಾರಿ ಈ ಭಾಗದ ಜನರು ಇಲ್ಲಿಂದ ನಿಲ್ಲುವಂತೆ ಒತ್ತಾಯಿಸಿದ್ರು. ಅಲ್ಲದೆ ಹೈಕಮಾಂಡ್ ಮೇಲೂ ಒತ್ತಡ ತಂದಿದ್ರು. ಹೀಗಾಗಿ ಬಾದಾಮಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೇನೆ ಎಂದರು.
ಮೋದಿ ಈ ಹಿಂದೆ ವಾರಣಾಸಿ, ಗುಜರಾತ್ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ರು. ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಕೂಡ ಎರಡೆರಡು ಕಡೆ ಸ್ಪರ್ಧಿಸಿದ್ದರು. ಅವರೆಲ್ಲ ಎರಡೆರಡು ಕಡೆ ಯಾಕೆ ನಿಂತಿದ್ರು? ಅವರಿಗೆ ಸೋಲಿನ ಭಯವಿತ್ತೆ ಎಂದು ಪ್ರಶ್ನೆ ಮಾಡಿದರು. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಬಾದಾಮಿಯಲ್ಲೇ ನಾನು ಗೆಲ್ಲುತ್ತೇನೆ. ಬಿಜೆಪಿ ಸೋಲುತ್ತದೆ ಎಂದು ತಿಳಿಸಿದರು.
ಬಾದಾಮಿಯ ತಹಶೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿ ಹೊರಬಂದಾಗ ಸಿಎಂಗೆ ಅಭಿಮಾನಿಯೊಬ್ಬರು ಪೇಟಾ ತೊಡಿಸಿ ಸಂಭ್ರಮಿಸಿದರು. ಸಿಎಂ ತೋಷದಿಂದಲೇ ಪೇಟಾ ಧರಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಸಿಎಂ ಬಾದಾಮಿ ಬನಶಂಕರಿ ದೇವಿ ದರ್ಶನ ಪಡೆದರು. ಸಿ.ಎಂ.ಇಬ್ರಾಹಿಂ, ಬಿ.ಬಿ.ಚಿಮ್ಮನಕಟ್ಟಿ, ಆರ್.ಬಿ.ತಿಮ್ಮಾಪುರ, ಎಸ್.ಆರ್.ಪಾಟೀಲ್ ಸೇರಿದಂತೆ ಹಲವರು ಸಿಎಂಗೆ ಸಾಥ್ ನೀಡಿದರು.
Click this button or press Ctrl+G to toggle between Kannada and English