[1]ಬೆಂಗಳೂರು: ಉನ್ನತ ಶಿಕ್ಷಣ ಖಾತೆ ಪಡೆಯಲು ಸಚಿವ ಜಿ.ಟಿ.ದೇವೇಗೌಡರು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಆ ಖಾತೆಯನ್ನು ತಾವೇ ನಿಭಾಯಿಸಲು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಿಎಂ ಕುಮಾರಸ್ವಾಮಿ ಅವರು ನಿನ್ನೆ ವಿಧಾನಸೌಧದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜತೆ ಮಹತ್ವದ ಸಭೆ ನಡೆಸಿದ್ದರು. ಆದರೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಸಭೆಗೆ ಗೈರಾಗಿದ್ದರು. ಆರಂಭದಿಂದಲೂ ಉನ್ನತ ಶಿಕ್ಷಣ ಖಾತೆಯನ್ನು ಒಪ್ಪಲು ಹಿಂದೇಟು ಹಾಕುತ್ತಿರುವ ಸಚಿವ ಜಿ.ಟಿ.ದೇವೇಗೌಡ ಸಭೆಗೆ ಗೈರು ಹಾಜರಾಗಿದ್ದರು. ಉನ್ನತ ಶಿಕ್ಷಣ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಖಾಸಗಿ ಕಾಲೇಜು ಆಡಳಿತ ಮಂಡಳಿ ಅಧಿಕಾರಿಗಳು ಹಾಜರಿದ್ದರು.
ಆ ಸಂದರ್ಭದಲ್ಲಿ ಉನ್ನತ ಶಿಕ್ಷಣ ಖಾತೆ ಬಗ್ಗೆ ಮಾತನಾಡಿದ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಸದ್ಯಕ್ಕೆ ಉನ್ನತ ಶಿಕ್ಷಣ ಖಾತೆ ನಾನೇ ನಿಭಾಯಿಸುತ್ತೇನೆ. ಒಂದು ವಾರದೊಳಗೆ ಈ ಖಾತೆಯ ಬದಲಾವಣೆ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಉನ್ನತ ಶಿಕ್ಷಣ ಖಾತೆ ಬದಲಿಗೆ ಜಿ.ಟಿ.ದೇವೇಗೌಡರಿಗೆ ಯಾವ ಖಾತೆ ನೀಡುತ್ತಾರೆ ಎಂಬುದರ ಬಗ್ಗೆ ಚರ್ಚೆಯಾಗುತ್ತಿದೆ.
ಮೂಲಗಳ ಪ್ರಕಾರ, ಬಂಡೆಪ್ಪ ಕಾಶಂಪೂರ ಅವರಿಗೆ ನೀಡಿರುವ ಸಹಕಾರ ಖಾತೆ, ಇಲ್ಲವೇ ಸಿಎಂ ಬಳಿ ಇರುವ ಯಾವುದಾದರು ಒಂದು ಖಾತೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ರೈತರಿಗೆ ಹತ್ತಿರವಿರುವ ಖಾತೆ ನೀಡಲು ಸಿಎಂ ಒಪ್ಪಿದ್ದಾರೆ ಎಂದು ಎರಡು ದಿನಗಳ ಹಿಂದೆ ಜಿ.ಟಿ.ದೇವೇಗೌಡರೇ ಹೇಳಿದ್ದರು.