[1]ಬೆಂಗಳೂರು: ವಿದ್ವತ್ ಮೇಲೆ ನಡೆದಿದ್ದ ಹಲ್ಲೆ ಪ್ರಕರಣ ಸಂಬಂಧ ನಲಪಾಡ್ ಹ್ಯಾರಿಸ್ಗೆ ಕೊನೆಗೂ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಹೈಕೋರ್ಟ್ ಏಕಸದಸ್ಯ ಪೀಠದಿಂದ ನಲಪಾಡ್ ಹ್ಯಾರಿಸ್ಗೆ ಜಾಮೀನು ಮಂಜೂರಾಗಿದೆ. ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ಈ ಆದೇಶ ನೀಡಿದ್ದಾರೆ.
2 ಲಕ್ಷ ಬಾಂಡ್ ಮತ್ತು ಇಬ್ಬರ ಶೂರಿಟಿ ಜೊತೆಗೆ ಸಾಕ್ಷ್ಯ ನಾಶ ಮಾಡದಂತೆ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ಇದರೊಂದಿಗೆ ನಲಪಾಡ್ 116 ದಿನಗಳ ಜೈಲು ವಾಸ ಅಂತ್ಯಗೊಂಡಂತಾಗಿದೆ.
ನಲಪಾಡ್ ಪರ ಹಿರಿಯ ವಕೀಲ ಬಿ.ವಿ.ಆಚಾರ್ಯ ವಾದ ಮಾಡಿದ್ದರು. ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಇಂದೇ ಜೈಲಿನಿಂದ ನಲಪಾಡ್ ಬಿಡುಗಡೆಯಾಗುವ ಸಾಧ್ಯತೆ ಇದೆ.
ಹೈಕೋರ್ಟ್ ಆದೇಶದ ಪ್ರತಿಯನ್ನು ಜೈಲಿಗೆ ತಲುಪಿಸಿದ ನಂತರ ನಲಪಾಡ್ ಬಿಡುಗಡೆಯಾಗಲಿದ್ದಾನೆ. ಸೆಷನ್ಸ್ ಕೋರ್ಟ್ ನಲಪಾಡ್ ಜಾಮೀನು ಅರ್ಜಿ ವಜಾಗೊಳಿಸಿತ್ತು. ನಲಪಾಡ್ ನಾಲ್ಕನೇ ಪ್ರಯತ್ನದಲ್ಲಿ ಫಲ ಸಿಕ್ಕಿದೆ.
ಘಟನೆ ನಡೆದ ನಂತರ ಮೊದಲ ಬಾರಿಗೆ ಸೆಷನ್ಸ್ ಕೋರ್ಟ್ ಜಾಮೀನು ಅರ್ಜಿ ವಜಾ ಮಾಡಿತ್ತು. ಆ ನಂತರ ಹೈಕೋರ್ಟ್ ಕೂಡ ನಲಪಾಡ್ ಅರ್ಜಿ ವಜಾಗೊಳಿಸಿತ್ತು. ಇದಾದ ನಂತರ ಚಾರ್ಜ್ ಶೀಟ್ ಸಲ್ಲಿಕೆ ನಂತರ ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ನಲಪಾಡ್ಗೆ ಮತ್ತೆ ಜಾಮೀನು ನಿರಾಕರಿಸಲಾಗಿತ್ತು.