[1]ಬಂಟ್ವಾಳ: ದಡ್ಡಲಕಾಡು ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆಯಲ್ಲಿ ಏರಿಕೆಯಾಗಿರುವುದರಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸ ಬಸ್ಸೊಂದನ್ನು ದುರ್ಗಾ ಫ್ರೆಂಡ್ಸ್ ಕ್ಲಬ್ ಉಚಿತವಾಗಿ ನೀಡಿದ್ದು ಅದನ್ನು ಶಾಲೆಗೆ ಹಸ್ತಾಂತರಿಸುವ ಕಾರ್ಯ ಶುಕ್ರವಾರ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪಾಡಿಗುತ್ತು ಶಾಲಾ ಬಸ್ಸಿನ ಕೀಲಿಕೈಯನ್ನು ಎಸ್ಡಿಎಂಸಿ ಅಧ್ಯಕ್ಷ ಹಾಗೂ ಮುಖ್ಯೋಪಾಧ್ಯಾರಿಗೆ ಹಸ್ತಾಂತರಿಸಿದರು. ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚು ಪುಣ್ಯವಂತರು. ನಾಲ್ಕು ಗೋಡಗಳ ಮಧ್ಯೆ ಶಿಕ್ಷಣ ಪಡೆಯುವ ನಗರ ಪ್ರದೇಶದ ಮಕ್ಕಳಿಗಿಂತ ಪ್ರಕೃತಿಯ ಮಡಿಲಿನಲ್ಲಿ ಶಿಕ್ಷಣ ಪಡೆಯವ ಅವಕಾಶ ಗ್ರಾಮೀಣ ಮಕ್ಕಳಿಗೆ ಮಾತ್ರ ಇದೆ ಎಂದರು. ಪ್ರಕಾಶ್ ಅಂಚನ್ ಅವರ ನೇತೃತ್ವದಲ್ಲಿ ದುರ್ಗಾ ಫ್ರೆಂಡ್ಸ್ ಕ್ಲಬ್ ನವರ ಶ್ರಮದಿಂದ ಶಾಲೆ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಿದೆ. ಮುಚ್ಚುವ ಸ್ಥಿತಿಯಲ್ಲಿದ್ದ ಶಾಲೆಯಲ್ಲಿ ಇಂದು ಐನ್ನೂರಕ್ಕಿಂತಲೂ ಅಧಿಕ ಮಕ್ಕಳಿರುವುದು ಕ್ಲಬ್ನ ಪರಿಶ್ರಮಕ್ಕೆ ಉದಾಹರಣೆಯಾಗಿದೆ ಎಂದರು.
ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ್ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯಾದಾಗ ದೇಶ ಬದಲಾಗಲು ಸಾಧ್ಯವಿದೆ. ಇಂತಹ ಶಾಲೆ ಗ್ರಾಮ ಗ್ರಾಮಗಳಲ್ಲಿ ಆಗಬೇಕಾದರೆ ಜನರ ತ್ಯಾಗ, ಶ್ರದ್ಧೆ ಬೇಕು ಎಂದರು. ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಪ್ರಾಸ್ತವಿಕವಾಗಿ ಮಾತನಾಡಿದರು.
ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ಪಂಜಿಕಲ್ಲು ಗ್ರಾ.ಪಂ.ಅಧ್ಯಕ್ಷೆ ಸುಮಿತ್ರ ಯೋಗೀಶ್, ಕೆನರಾ ಬ್ಯಾಂಕಿನ ಮನೋಹರ್ ನಾಯಕ್, ಗ್ರಾ.ಪಂ.ಸದಸ್ಯರಾದ ಪೂವಪ್ಪ ಮೆಂಡನ್, ಕೇಶವ ಗೌಡ ದಡ್ಡಲಕಾಡು, ರೂಪಲೋಕನಾಥ, ಎಸ್ಡಿಎಂಸಿ ಅಧ್ಯಕ್ಷ ರಾಮಚಂದ್ರ ಪೂಜಾರಿ ಕರಂಕಿ, ಕರುಣೇಂದ್ರ ಪೂಜಾರಿ, ಧರ್ಣಪ್ಪ ಪೂಜಾರಿ, ದುರ್ಗಾ ಫ್ರೆಂಡ್ಸ್ ಕ್ಲಬ್ ಕಾರ್ಯದರ್ಶಿ ನವೀನ್ ಸೇಸಗುರಿ, ವಿನೋದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯ ಮೌರೀಸ್ ಡಿಸೋಜಾ ಸ್ವಾಗತಿಸಿ, ಪುರುಷೋತ್ತಮ ಅಂಚನ್ ವಂದಿಸಿದರು. ಸಹಶಿಕ್ಷಕಿ ಹಿಲ್ಡಾ ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಾಸಕ ರಾಜೇಶ್ ನಾೈಕ್ ಅವರನ್ನು ಸನ್ಮಾನಿಸಲಾಯಿತು.