ಮಂಗಳೂರು : ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 36 ನೇ ಶ್ರಮದಾನವನ್ನು ಊರ್ವಾ ಮಾರ್ಕೆಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರವಿವಾರದಂದು ಬೆಳಿಗ್ಗೆ 7:30 ರಿಂದ 10 ಗಂಟೆಯವರೆಗೆ ಆಯೋಜಿಸಲಾಗಿತ್ತು.
ಬೆಳಿಗ್ಗೆಯಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆಗೆ ಕಾರ್ಯಕರ್ತರು ಆಗಮಿಸಿದ್ದರು. ಮಳೆಯು ಜೋರಾಗಿದ್ದರಿಂದ ಶ್ರಮದಾನ ಮಾದಲು ಅಡ್ಡಿಯಾಗಿತ್ತು. ಆದರೆ ಕಾರ್ಯಕರ್ತರು ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ನೇತೃತ್ವದಲ್ಲಿ ಸ್ವಚ್ಛತೆಯ ಕುರಿತು ವಿಚಾರ ವಿನಿಮಯ ಮಾಡಿಕೊಂಡರು. ಆರಂಭದಲ್ಲಿ ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂzಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಳೆದ ಮೂರುವರೆ ವರ್ಷಗಳಿಂದ ಕಾರ್ಯಕರ್ತರ ಅಪರಿಮಿತ ಉತ್ಸಾಹ ಹಾಗೂ ಶಕ್ತಿಯಿಂದಾಗಿ ಈ ಅಭಿಯಾನ ಯಶಸ್ವಿಯಾಗುತ್ತಿದೆ. ಇದು ಕೇವಲ ಕಸಗುಡಿಸಿ ಬೀದಿಗಳನ್ನು ಸ್ವಚ್ಛ ಮಾಡುವ ಕಾರ್ಯವಲ್ಲ ಬದಲಿಗೆ ಮನಸ್ಸುಗಳನ್ನು ಶುದ್ಧಗೊಳಿಸಿ, ಸಮಾಜಮುಖಿ ಚಿಂತನೆಗಳನ್ನು ಬಿತ್ತುವ ಅಭಿಯಾನವಾಗಿ ಮುನ್ನಡೆಯುತ್ತಿರುವುದು ವಿಶೇಷ. ಸಮಾಜಸೇವೆ ಮಾಡಬಯಸುವ ಯುವಕರಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟ ಹೆಗ್ಗಳಿಕೆ ಈ ಅಭಿಯಾನಕ್ಕಿದೆ. ಇದೊಂದು ರಾಜಕೀಯೇತರ ಚಳುವಳಿಯಾಗಿ ಜಾತಿ-ಮತ-ಪಂಥಗಳನ್ನು ಮೀರಿ, ಮೇಲು-ಕೀಳುಗಳೆನ್ನದೆ ಸಕಲರನ್ನೂ ಒಗ್ಗೂಡಿಸಿಕೊಂಡು ನಗರದ ಸ್ವಚ್ಛತೆ ಹಾಗೂ ಹಿತಕ್ಕಾಗಿ ಒಂದಾಗಿ ಕಾರ್ಯನಿರ್ವಹಣೆ ಮಾಡುತ್ತಿರುವುದು ಈ ಅಭಿಯಾನದಲ್ಲಿ ಕಾಣಬಹುದಾಗಿದೆ. ಇಲ್ಲಿಯತನಕ ನಾವು ಕೇವಲ ಶ್ರಮದಾನದ ಮುಖಾಂತರ ಕೆಲಸ ಮಾಡುತ್ತಿದ್ದೆವು ಈಗ ಜನಜಾಗೃತಿಯ ಮೂಲಕ ಸಾರ್ವಜನಿಕರು ಹಾಗೂ ಸರಕಾರಿ ವ್ಯವಸ್ಥೆಯ ಮದ್ಯೆ ಕೊಂಡಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ಐದನೇ ಹಂತದ ಅಭಿಯಾನವನ್ನು ವಿಭಿನ್ನವಾಗಿ ಹಾಗೂ ವಿಶಿಷ್ಠವಾಗಿ ಯೋಜಿಸಲಾಗುತ್ತಿದೆ ಎಂದು ಹೇಳಿದರು.
ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ ಸ್ವಚ್ಛತೆಯನ್ನು ಒಂದು ಸಾಧನವನ್ನಾಗಿ ಮಾಡಿಕೊಂಡು ನಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡಾಗ ಈ ಅಭಿಯಾನ ಸಾರ್ಥಕವಾಗುತ್ತದೆ. ಪ್ರತಿಯೊಬ್ಬರೂ ನಿಸ್ವಾರ್ಥತೆಯಿಂದ ಒಂದಿಷ್ಟು ಯೋಚನೆ ಮಾಡುವಂತಾದರೆ ಇಡೀ ಭಾರತ ಬದಲಾಗಲು ಸಾಧ್ಯ. ನಾನು ನನ್ನದೆನ್ನದೇ, ನಾವು ನಮ್ಮದು ಎನ್ನುವ ಭಾವನೆ ಪ್ರತಿ ಭಾರತೀಯರಲ್ಲಿ ಬರುವಂತಾಗಲು ಈ ತೆರನಾದ ಶ್ರಮದಾನಗಳ ಅಗತ್ಯತೆಯಿದೆ. ದುರ್ಜನರ ದುಷ್ಟತನಕ್ಕಿಂತ ಸಜ್ಜನರ ನಿಷ್ಕ್ರಿಯತೆ ಸಮಾಜಕ್ಕೆ ಅಪಾಯಕಾರಿಯಾಗಬಹುದು. ಅದಕ್ಕೆ ಅವಕಾಶ ನೀಡದೆ ಸಮಾಜಕ್ಕೆ ಒಳಿತು ಮಾಡಬೇಕೆನ್ನುವ ಮನಸ್ಸುಗಳು ಒಂದೆಡೆ ಕುಳಿತು ಈ ತೆರನಾಗಿ ಚಿಂತಿಸುತ್ತಿರುವುದು ಬದಲಾವಣೆಯ ಸಂಕೇತವಾಗಿದೆ ಎಂದು ತಿಳಿಸಿದರು. ತದನಂತರ ಅನೇಕ ಕಾರ್ಯಕತರು ತಮ್ಮ ಮನದಾಳದ ಮಾತುಗಳನ್ನಾಡಿದರು. ಪ್ರಾಧ್ಯಾಪಕ ಪ್ರೊ. ಶೇಷಪ್ಪ ಅಮೀನ್, ಮುಸಾ ಶರೀಫ್, ಕುದ್ರೋಳಿ ಗಣೇಶ್, ಕಮಲಾಕ್ಷ ಪೈ, ಯೋಗಿಶ್ ಕಾಯರ್ತಡ್ಕ, ಪಿಯೂಷ್ ಶೆಣೈ ಅನಿಸಿಕೆಗಳನ್ನು ಹಂಚಿಕೊಂಡರು.
ಮಳೆಯಲ್ಲಿ ಶ್ರಮದಾನ: ವಿಚಾರ ವಿನಿಮಯದ ಬಳಿಕ ಸುಮಾರು ಒಂದು ಗಂಟೆಯ ಕಾಲ ಶ್ರಮದಾನ ಮಾಡಲಾಯಿತು. ಊರ್ವಾ ಮಾರ್ಕೆಟ್ ಬಸ್ ತಂಗುದಾಣಕ್ಕೆ ಅಂಟಿಸಲಾಗಿದ್ದ ಪೋಸ್ಟರ್ ಕಿತ್ತು ಶುಚಿಮಾಡಿ ಒಳಾಂಗಣ ಹಾಗೂ ಹೊರಾಂಗಣವನ್ನು ಸ್ವಚ್ಛಗೊಳಿಸಲಾಯಿತು. ಸುತ್ತಮುತ್ತ ಬೆಳೆದಿದ್ದ ಹುಲ್ಲು ಕತ್ತರಿಸಿ ತೆಗೆಯಲಾಯಿತು. ಅಲ್ಲಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಹಾಗೂ ಪೇಪರ್ ಹೆಕ್ಕಿ ತೆಗೆಯಲಾಯಿತು. ಕಾರ್ಯಕರ್ತರು ನಗರದ ಬೇರೆಬೇರೆ ಕಡೆಗಳಲ್ಲಿ ಹೋಗಿ ಪೋಸ್ಟರ್ ಬ್ಯಾನರ್ ತೆರವು ಮಾಡಿದರು. ಮಳೆಯನ್ನೂ ಲೆಕ್ಕಿಸದೇ ಸ್ವಯಂಸೇವಕರು ಶ್ರಮದಾನ ಮಾಡಿದರು.
ಸ್ವಚ್ಛ ಗ್ರಾಮ: ಅರ್ಕುಳ ಮೇರ್ಲಪದವು ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮ ಜರುಗಿತು. ಮೇರ್ಲಪದವಿನಿಂದ ವಳಚ್ಚಿಲ ಶಾಲೆಯ ವರೆಗೆಗಿನ ತೋಡು ಹಾಗೂ ಒಳಚರಂಡಿಗಳನ್ನು ಶುಚಿಗೊಳಿಸಲಾಯಿತು. ಜೊತೆಗೆ ರಸ್ತೆಗಳ ಎರಡೂ ಬದಿಗಳನ್ನು ಗುಡಿಸಿ ಶುಚಿಗೊಳಿಸಲಾಯಿತು. ಯಾದವ ಗಾಣಿಗಾ, ನಿಶ್ಚಿತಾ ಎಸ್ ಬಿ, ರಾಜೇಶ್ ನವಜ್ಯೋತಿ ನಗರ, ಅಶೋಕ ಕೊಟ್ಟಾರಿ, ರಾಜೇಶ್ ಶೆಟ್ಟಿ, ಪ್ರಶಾಂತ ಪೂಜಾರಿ, ನಾಗನಾಗಣಿ ಕ್ಷೇತ್ರದ ಸದಸ್ಯರುಗಳು ಹಾಗೂ ಗ್ರಾಮಸ್ಥರು ಈ ಸ್ವಚ್ಛತಾ ಅಭಿಯಾನದಲ್ಲಿ ಕೈಜೋಡಿಸಿದರು. ಶ್ರೀ ಜಯರಾಮ್ ಶೆಟ್ಟಿಗಾರ ಕಾರ್ಯಕ್ರಮವನ್ನು ಸಂಯೋಜನೆ ಮಾಡಿದರು.
ಇಮ್ತಿಯಾಜ್ ಶೇಖ್, ಅಕ್ಷಿತ ಚಿಂಜಾರು, ಸುಮಾ ಕೋಡಿಕಲ್, ಸಾರಿಕಾ ಅವಿನಾಶ್, ಸತೀಶ್ ಮೂಡಿಗೆರೆ, ಪುನೀತ್ ಬೋಳಾರ, ಪೂಜಾ ರಾಜ್, ಸುಬ್ರಾಯ್ ಭಟ್ ಸೇರಿದಂತೆ ಅನೆಕ ಕಾರ್ಯಕರ್ತರು ಶ್ರಮದಾನದಲ್ಲಿ ಪಾಲ್ಗೊಂಡರು. ದಿಲ್ ರಾಜ್ ಆಳ್ವ ಕಾರ್ಯಕ್ರಮನ್ನು ಸಂಯೊಜನೆ ಮಾಡಿದರು. ಕಾರ್ಯಕ್ರಮದ ಬಳಿಕ ಎಲ್ಲರಿಗೂ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಅಭಿಯಾನಕ್ಕೆ ಎಂ ಆರ್ಪಿಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿವೆ.
ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕೆಲವು ಚಿತ್ರಗಳನ್ನು ಲಗತ್ತಿಸಿದ್ದೇವೆ. ದಯಮಾಡಿ ಈ ವರದಿಯನ್ನು ಪ್ರಕಟಿಸಿ ಈ ಮೂಲಕ ನೀವೂ ಈ ಸ್ವಚ್ಛತಾ ಅಭಿಯಾನದಲ್ಲಿ ಕೈಜೋಡಿಸಿ ಸಹಕರಿಸಬೇಕೆಂದು ಕೇಳಿಕೊಳ್ಳುವೆವು.
Click this button or press Ctrl+G to toggle between Kannada and English