[1]ಮೈಸೂರು: ನಾನಲ್ಲ, ಹೆಣವೂ ಸಹ ಬಿಜೆಪಿ ಹತ್ತಿರ ಸುಳಿಯುವುದಿಲ್ಲ. ಕೋಮುವಾದಿಗಳಿಂದ ನಾನು ಎಂದಿಗೂ ದೂರ ಎಂದು ಮಾಜಿ ಸಚಿವ ಡಾ. ಹೆಚ್. ಸಿ. ಮಹದೇವಪ್ಪ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಕಾಂಗ್ರೆಸ್ಗೆ ಬಂದಿರುವವರು ಬಿಜೆಪಿಗೆ ಹೋಗುತ್ತಾರೆ ಎಂಬ ಪಿತೂರಿ ಮಾಡುತ್ತಿದ್ದಾರೆ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ ಎಂದ ಅವರು ಚುನಾವಣೆ ಸೋಲಿನ ನಂತರ ದಿಗ್ಭ್ರಮೆಗೊಳಗಾಗಿದ್ದೆ. ಸೋಲಿನಿಂದ ಆಚೆ ಬರಲು ಒಂದೂವರೆ ತಿಂಗಳು ಬೇಕಾಯಿತು ಎಂದು ಬೇಸರ ಹೊರಹಾಕಿದರು.
ದೇಹದ ಅಂಗಾಂಗ ಪುನಶ್ಚೇತಕ್ಕೆ ಒಂದೂವರೆ ತಿಂಗಳಾಯಿತು. ಅನಾರೋಗ್ಯದ ಹಿನ್ನೆಲೆಯಲ್ಲಿ ಪ್ರಕೃತಿ ಚಿಕಿತ್ಸೆಗೆ ತೆರಳಿದ್ದೆ. ಈ ಕಾರಣದಿಂದ ಸಭೆ ಸಮಾರಂಭದಲ್ಲಿ ಭಾಗಿಯಾಗಿರಲಿಲ್ಲ. ನನ್ನ ಸೋಲಿಗೆ ಜೆಡಿಎಸ್ ಗೆಲುವು ಕಾರಣವಲ್ಲ ಎಂದರು.
ಅಭಿವೃದ್ಧಿ ಮೇಲೆ ಜಾತಿ ಸವಾರಿ ಮಾಡಿತು. ನಮ್ಮ ಯೋಜನೆಗಳಿಗೆ ಜನ ಮನ್ನಣೆ ನೀಡಲೇ ಇಲ್ಲ.
ನನ್ನ ಸೋಲಿಗಿಂತ ಸಿದ್ದರಾಮಯ್ಯ ಹಾಗೂ ಪಕ್ಷದ ಸೋಲು ನನಗೆ ಆಘಾತ ಮೂಡಿಸಿತು ಎಂದು ತಿಳಿಸಿದರು.
ನನ್ನ ಮಗನ ಹೆಸರು ಕ್ಷೇತ್ರದಲ್ಲಿ ಕೇಳಿ ಬಂದಿದ್ದಕ್ಕು ನನ್ನ ಸೋಲಿಗೂ ಯಾವುದೇ ಸಂಬಂಧ ಇಲ್ಲವೆಂದರು. ಅಲ್ಲದೆ, ಸಿದ್ದರಾಮಯ್ಯ ಹಾಗೂ ತಮ್ಮ ನಡುವಿನ ಸ್ನೇಹದ ಬಗ್ಗೆ ಪ್ರತಿಕ್ರಿಯಿಸಿ, ನನ್ನ ಮತ್ತು ಸಿದ್ದರಾಮಯ್ಯ ನಡುವೆ ಸ್ನೇಹ ಹಳಸಿದೆ ಅಂತಾ ಹೇಳಿದವರು ಯಾರು? ಸಿದ್ದರಾಮಯ್ಯನವರೇನಾದ್ರು ಹೇಳಿದ್ದಾರಾ? ನಾವು ಚೆನ್ನಾಗಿಯೇ ಇದ್ದೇವೆ ಎಂದು ಖಡಕ್ ಆಗಿ ಮಹದೇವವಪ್ಪ ಉತ್ತರಿಸಿದರು.
ನಮ್ಮ ಸಂಬಂಧ ಕೆಟ್ಟಿದೆ ಅಂತಾ ಸುದ್ದಿ ಸೃಷ್ಟಿಸಿ ಲಾಭ ಪಡೆಯುವ ಕೆಲಸವನ್ನು ಕೆಲವರು ಮಾಡ್ತಿದ್ದಾರೆ. ಆ ರೀತಿಯ ಪ್ರಯತ್ನ ಯಶಸ್ವಿ ಆಗೋಲ್ಲ ಎಂದು ಮಹದೇವಪ್ಪ ಹೇಳಿದರು.